ಡಿ.ಕೆ.ಶಿವಕುಮಾರ್’ಗೆ ಸಿಎಂ ಆಗಲು ಅವಕಾಶ ನೀಡಲಿ: ನಂಜಾವಧೂತ ಶ್ರೀ ಆಗ್ರಹ
ಬೆಂಗಳೂರು: ಡಿಕೆ ಶಿವಕುಮಾರ್ ಅವರು ಸಿಎಂ ಆಗಬೇಕು ಎಂದು ಸ್ಫಟಿಕಪುರಿ ಮಹಾಸಂಸ್ಥಾನದ ನಂಜಾವಧೂತಶ್ರೀ (Nanjavadutha swamiji) ಹೇಳಿದ್ದಾರೆ. ಈ ಸಂಬಂಧ ವಿಜಯನಗರದಲ್ಲಿ ಮಾತನಾಡಿದ ಅವರು, ಡಿ.ಕೆ ಶಿವಕುಮಾರ್ ಸಿಎಂ ಹುದ್ದೆ ಕೇಳಲು ಅರ್ಹರಿದ್ದಾರೆ.
ಒಕ್ಕಲಿಗ ಸಿಎಂಗಳು ರಾಜ್ಯದ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಸಿಎಂ ಆಗಿದ್ದ ನಮ್ಮ ಸಮುದಾಯದವರಿಗೆ ಹೆಚ್ಚಿನ ಅವಕಾಶ ಸಿಕ್ಕಿಲ್ಲ. ಹೆಚ್ಡಿ ಕುಮಾರಸ್ವಾಮಿ ಸೇರಿದಂತೆ ಹಲವರಿಗೆ 5 ವರ್ಷ ಪೂರ್ಣ ಅವಧಿ ಸಿಕ್ಕಿಲ್ಲ. ಸಿಕ್ಕ ಸಮಯದಲ್ಲೇ ಹಲವು ಜನಪರ ಕಾರ್ಯಕ್ರಮ ಜಾರಿಗೊಳಿಸಿದ್ದಾರೆ.
ಎಸ್.ಎಂ.ಕೃಷ್ಣ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿ ಆಗಿತ್ತು. ಬೆಂಗಳೂರನ್ನು ಸಿಲಿಕಾನ್ ವ್ಯಾಲಿ ಮಾಡಿದ ಕೀರ್ತಿ ಎಸ್ಎಂ ಕೃಷ್ಣ ಅವರಿಗೆ ಸಲುತ್ತೆ. ಬಿಸಿಯೂಟ ಯೋಜನೆ, ಸ್ತ್ರೀಶಕ್ತಿ ಸಂಘಗಳನ್ನು ಸ್ಥಾಪಿಸಿದ್ದರು ಎಂದು ಹೇಳಿದರು. ಪಕ್ಷದ ಸಂಪ್ರದಾಯದಂತೆ ಕೆಪಿಸಿಸಿ ಅಧ್ಯಕ್ಷರಾದವರು ಸಿಎಂ ಆಗಲಿ. ಅದೇ ರೀತಿ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಲಿ. ಸಾಕಷ್ಟು ಸಂಕಷ್ಟಗಳ ನಡುವೆಯೂ ಪಕ್ಷ ಸಂಘಟಿಸಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದರು. ಸಿಎಂ ಆಗಿದ್ದ ವೇಳೆ ಸಿದ್ದರಾಮಯ್ಯ ಉತ್ತಮ ಆಡಳಿತ ನೀಡಿದ್ದಾರೆ. ಈ ಸಲ ಡಿ.ಕೆ.ಶಿವಕುಮಾರ್ಗೆ ಸಿಎಂ ಆಗಲು ಅವಕಾಶ ನೀಡಲಿ ಎಂದು ಹೇಳಿದ್ದಾರೆ.