ಮುಸ್ಲಿಂ ಶಾಸಕರಿಗೆ ಮಂತ್ರಿಗಿರಿ ಹಾಗೂ ಡಿಸಿಎಂ ಸ್ಥಾನ ನೀಡಬೇಕು: ಶಾಫಿ ಸಅದಿ ಆಗ್ರಹ
ಬೆಂಗಳೂರು: ಮುಸ್ಲಿಂ ಶಾಸಕರಿಗೆ ಮಂತ್ರಿಗಿರಿ ಹಾಗೂ ಡಿಸಿಎಂ ಸ್ಥಾನ ನೀಡಬೇಕೆಂದು ವಕ್ಫ್ ಬೋರ್ಡ್ ಅಧ್ಯಕ್ಷ (Waqf Board Chairman) ಶಾಫಿ ಸಅದಿ ಹೇಳಿದ್ದಾರೆ. ಈ ಸಂಬಂಧ ಬೆಂಗಳೂರಿನ ಕಚೇರಿಯಲ್ಲಿ ಮಾತನಾಡಿದ ಅವರು,224 ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಲ್ಲಿ ಮುಸ್ಲಿಮರು ಎಲೆಕ್ಷನ್ಗೆ ನಿಂತಿದ್ದರು.
ಅದರಲ್ಲಿ 9 ಜನರು ಗೆದ್ದಿದ್ದಾರೆ. ಮಾತ್ರವಲ್ಲದೆ, ರಾಜ್ಯದಲ್ಲಿ 73 ಶಾಸಕರು ಗೆಲ್ಲಲು ಮುಸ್ಲಿಮರು ಪ್ರಮುಖ ಪಾತ್ರವಹಿಸಿದ್ದಾರೆ ಎಂದು ಹೇಳಿದ ಶಾಫೀ ಸಅದಿ,
ನಾವು ಕಾಂಗ್ರೆಸ್ ಪಕ್ಷಕ್ಕೆ ಮತದಾನ ಮಾಡಲು ಎಲ್ಲಾ ಮಸೀದಿಗಳಲ್ಲಿ ಅಭಿಯಾನ, ಜಾಗೃತಿ ಮಾಡಿದ್ದೆವು ಎಂದು ತಿಳಿಸಿದರು. ಎಸ್ ಎಂ ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದಾಗ ಸರ್ಕಾರದಲ್ಲಿ ಮುಸ್ಲಿಂ ಸಮುದಾಯದಿಂದ ಆಯ್ಕೆಯಾದ ಐದು ಶಾಸಕರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಹಾಗಾಗಿ ಈ ಬಾರಿಯ ಸರ್ಕಾರದಲ್ಲೂ ಐವರಿಗೆ ಸಚಿವ ಸ್ಥಾನ ಮತ್ತು ಒಂದು ಡಿಸಿಎಂ ಹುದ್ದೆ ನೀಡಬೇಕು. ನಾವು ಮುಖ್ಯಮಂತ್ರಿ ಸ್ಥಾನ ಕೇಳುತ್ತಿಲ್ಲ, ಕರ್ನಾಟಕ ಇತಿಹಾಸದಲ್ಲಿ ಮುಸ್ಲಿಂ ಮುಖ್ಯಮಂತ್ರಿ ಆಗಿಲ್ಲ ಎಂದರು.