ಪ್ರಧಾನಿ ಮೋದಿಯವರು ಬೆಂಗಳೂರಿಗೆ ಬಹಳ ದೊಡ್ಡ ಕೊಡುಗೆಯನ್ನು ಕೊಟ್ಟಿದ್ದಾರೆ: ಸಚಿವ ಮುನಿರತ್ನ
ಬೆಂಗಳೂರು: ಚುನಾವಣೆಯ (Election) ಸಂದರ್ಭದಲ್ಲಿ ವಿರೋಧ ಪಕ್ಷಗಳು ನಾನಾರೀತಿಯ ನಾಟಕಗಳನ್ನು ಮಾಡುತ್ತಿದೆ. ಆದರೆ ಈ ರೀತಿಯ ದೊಡ್ಡ ದೊಡ್ಡ ಕಾರ್ಯಕ್ರಮಗಳನ್ನು ಮಾಡುತ್ತಿರುವ ಬಗ್ಗೆ ಯಾರೂ ಮಾತನಾಡುವುದಿಲ್ಲ. ನಮ್ಮ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾಡಿರುವಂತಹ ಕಾರ್ಯಕ್ರಮ ಬಹುಷಃ ಇನ್ನೂ ಐವತ್ತು ವರ್ಷವಾದರೂ ಯಾರೂ ಆ ಮಟ್ಟಕ್ಕೆ ತಲುಪಲು ಆಗುವುದಿಲ್ಲ.
ಅಷ್ಟು ಕೆಲಸವನ್ನು ನಮ್ಮ ಕೇಂದ್ರ ಮತ್ತು ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಸಚಿವ ಮುನಿರತ್ನ (Munirathna) ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ (Bengaluru) ಅಂಜನಾ ನಗರದಲ್ಲಿರುವ ಎಸ್ಟಿ ಸೋಮಶೇಖರ್ (S.T.Somashekar) ಅವರ ಕಚೇರಿಯಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಪ್ರಧಾನ ಮಂತ್ರಿಗಳು ಶನಿವಾರ 9 ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಪಟ್ಟಂತೆ ರೋಡ್ ಶೋ ನಡೆಸಲಿದ್ದಾರೆ. ಅದರಲ್ಲಿ ಬಹಳ ಪ್ರಮುಖವಾಗಿ ಯಶವಂತಪುರ, ರಾಜರಾಜೇಶ್ವರಿ, ಮಹಾಲಕ್ಷ್ಮಿಪುರಂ ಹಾಗೂ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಜನತೆಗೆ ನಮ್ಮ ಮೆಟ್ರೋ ಮೂಲಕ ಪ್ರಧಾನಿ ಮೋದಿಯವರು ಬಹಳ ದೊಡ್ಡ ಕೊಡುಗೆಯನ್ನು ಕೊಟ್ಟಿದ್ದಾರೆ ಎಂದರು.