ಮಾನ್ಯತೆ ಪಡೆಯದ ಪಕ್ಷ ಮತ್ತು ಪಕ್ಷೇತರ ಅಭ್ಯರ್ಥಿಗಳು ಪ್ರಚಾರಕ್ಕೆ ವಾಹನ ಬಳಸಬಹುದು: ಹೈಕೋರ್ಟ್
ಬೆಂಗಳೂರು: ಮಾನ್ಯತೆ ಪಡೆಯದ ಪಕ್ಷ ಮತ್ತು ಪಕ್ಷೇತರ ಅಭ್ಯರ್ಥಿಗಳು ಪ್ರಚಾರಕ್ಕೆ ವಾಹನ ಮತ್ತು ಧ್ವನಿವರ್ಧಕ ಗಳನ್ನು ಬಳಸಬಹುದು ಎಂದು ಬೆಂಗಳೂರಿನ ಹೈಕೋರ್ಟ್ ಹೇಳಿದೆ. ಗದಗ ಮತ್ತು ವಿಜಯನಗರ ಜಿಲ್ಲಾ ಚುನಾವಣಾ ಧಿಕಾರಿ ಮತ್ತು ಯಲಹಂಕ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಕೆಆರ್ಎಸ್ಪಿ ಮತ್ತು ಪಕ್ಷೇತರ ಅಭ್ಯರ್ಥಿಗೆ ವಾಹನ ಮತ್ತು ಧ್ವನಿವರ್ಧಕ ಬಳಸಲು ಅನುಮತಿ ನಿರಾಕರಿಸಿದ್ದರು.
ಇದನ್ನು ಪ್ರಶ್ನಿಸಿ ಪಕ್ಷದ ಪ್ರಧಾನ ಕಾರ್ಯದರ್ಶಿ ಸಿ ಎನ್ ದೀಪಕ್ ಮತ್ತು,
ಅಭ್ಯರ್ಥಿ ಜೆಪಿ ರಘುನಂದನ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು. ಚುನಾವಣಾ ಪ್ರಚಾರ ನಡೆಸಲು ಮಾನ್ಯತೆ ಹೊಂದಿದ ಪಕ್ಷಗಳಿಗೆ ನೀಡುವ ರೀತಿಯಲ್ಲಿಯೇ ಗದಗ ಮತ್ತು ಹೊಸಪೇಟೆಯ ಚುನಾವಣಾಧಿಕಾರಿಗಳು ಅರ್ಜಿದಾರ ಪಕ್ಷದ ಪದಾಧಿಕಾರಿಗಳಿಗೆ ವಾಹನ ಮತ್ತು ಧ್ವನಿವರ್ಧಕ ಬಳಕೆಗೆ ಅನುಮತಿಸಬೇಕು. ಪ್ರಕರಣಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ಆಕ್ಷೇಪಣೆ ಸಲ್ಲಿಸಬೇಕು” ಎಂದು ನ್ಯಾಯಾಲಯವು ಮಧ್ಯಂತರ ಆದೇಶದಲ್ಲಿ ವಿವರಿಸಿದೆ..