ಕಾರ್ಮಿಕರ ಮಕ್ಕಳಿಗೆ ಪೈಲೆಟ್ ತರಬೇತಿ ನೀಡುವ ಯೋಜನೆ ಜಾರಿ: ಸಚಿವ ಶಿವರಾಂ ಹೆಬ್ಬಾರ್
ಬೆಂಗಳೂರು: ದೇಶದಲ್ಲಿ ಮೊದಲ ಬಾರಿಗೆ ಕಾರ್ಮಿಕರ ಮಕ್ಕಳಿಗೆ ಪೈಲೆಟ್ ತರಬೇತಿ ನೀಡುವ ಯೋಜನೆ ಜಾರಿಗೆ ಸರ್ಕಾರ ಮುಂದಾಗಿದೆ. ಹೌದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಶಿವರಾಂ ಹೆಬ್ಬಾರ್, ಕಾರ್ಮಿಕರ ಮಕ್ಕಳಿಗೆ ಪೈಲೆಟ್ ತರಬೇತಿ ನೀಡುವ ಯೋಜನೆ ಜಾರಿಗೆ ತೀರ್ಮಾನಿಸಿದ್ದು, ಆಯ್ಕೆಯಾದ ಅರ್ಹ ಕಾರ್ಮಿಕರ ಮಕ್ಕಳಿಗೆ ಉಚಿತ ತರಬೇತಿ ವ್ಯವಸ್ಥೆ ಮಾಡಲಾಗಿದೆ ಎಂದರು.
ತರಬೇತಿ ನೀಡಲು ಜಕ್ಕೂರು ವೈಮಾನಿಕ ಸಂಸ್ಥೆಗೆ 70 ಕೋಟಿ ರೂಪಾಯಿ ನೀಡಲಿದ್ದು, ಅಭ್ಯರ್ಥಿ ಆಯ್ಕೆಯನ್ನು ಸಂಸ್ಥೆಗೆ ಒಪ್ಪಿಸಲಾಗಿದೆ.
ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದು 1,858 ಅರ್ಜಿಗಳಲ್ಲಿ 1573 ಅರ್ಜಿಗಳು ಕ್ರಮಬದ್ಧವಾಗಿವೆ. ನಿಯಮದ ಅನ್ವಯ ಮೂವರು ಮಹಿಳಾ ಅಭ್ಯರ್ಥಿಗಳು ಸೇರಿದಂತೆ 17 ಮಂದಿಯನ್ನು ಆಯ್ಕೆ ಮಾಡಲಾಗಿದ್ದು, ಮುಂದಿನ ಹಂತದಲ್ಲಿ ಇನ್ನಷ್ಟು ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಎರಡು ವರ್ಷಗಳ ತರಬೇತಿ ಬಳಿಕ ಅಭ್ಯರ್ಥಿಗಳು ವಾಣಿಜ್ಯ ಪೈಲೆಟ್ ಲೈಸೆನ್ಸ್ ಪಡೆದು ವೈಮಾನಿಕ ಕ್ಷೇತ್ರದಲ್ಲಿ ಉದ್ಯೋಗವಕಾಶ ಪಡೆದುಕೊಳ್ಳಲಿದ್ದಾರೆ ಎಂದು ಸಚಿವ ಶಿವರಾಂ ಹೆಬ್ಬಾರ್ ತಿಳಿಸಿದ್ದಾರೆ.