ವಿಶ್ವಕಪ್ ಟೂರ್ನಿಯಿಂದ ಶಿಖರ್ ಧವನ್ ಔಟ್
ಮುಂಬೈ: ಟೀಂ ಇಂಡಿಯಾ ಅನುಭವಿ ಆಟಗಾರ ಶಿಖರ್ ಧವನ್ 2023ರ ಏಕದಿನ ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾದಿಂದ ಹೊರಬೀಳುವುದು ಖಚಿತವಾಗಿದೆ. ಅಲ್ಲದೇ ವಿಶ್ವಕಪ್ಗೂ ಮುನ್ನ ನಡೆಯಲಿರುವ ವೆಸ್ಟ್ ಇಂಡೀಸ್ ಸರಣಿಯಿಂದಲೂ ಶಿಖರ್ ಧವನ್ ಹೊರಬಿದ್ದಿದ್ದಾರೆ.
ಈ ನಡುವೆ ಮಹತ್ವದ ಬೆಳವಣಿಗೆಯೊಂದು ಕಂಡುಬಂದಿದ್ದು, ಮತ್ತೆ ಶಿಖರ್ ಧವನ್ ಟೀಂ ಇಂಡಿಯಾ ನಾಯಕತ್ವ ವಹಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಹೌದು.. ಈ ಬಾರಿ ಚೀನಾದ ಹ್ಯಾಂಗ್ಜೂನಲ್ಲಿ ಏಷ್ಯನ್ ಗೇಮ್ಸ್ ಕ್ರೀಡಾಕೂಟ ನಡೆಯಲಿದ್ದು ಈ ಟೂರ್ನಿಯಲ್ಲಿ ಕ್ರಿಕೆಟ್ ಕೂಡ ಸ್ಪರ್ಧೆಯ ಭಾಗವಾಗಿದೆ. ಸೆಪ್ಟೆಂಬರ್ 23 ರಿಂದ ಅಕ್ಟೋಬರ್ 8 ರವರೆಗೆ ಈ ಟೂರ್ನಿ ನಡೆಯಲಿದ್ದು, ಟಿ20 ಮಾದರಿಯಲ್ಲಿ ನಡೆಯಲಿರುವ ಈ ಟೂರ್ನಿಗೆ ಬಿಸಿಸಿಐ ಭಾರತದ ಮಹಿಳಾ ಹಾಗೂ ಪುರುಷರ ತಂಡವನ್ನು ಕಣಕ್ಕಿಳಿಸಲು ಒಪ್ಪಿದೆ. ಟೀಂ ಇಂಡಿಯಾ ಪ್ರಮುಖ ಆಟಗಾರರು ಏಕದಿನ ವಿಶ್ವಕಪ್ ಹಾಗೂ ಏಷ್ಯಾಕಪ್ ಟೂರ್ನಿಗಳಲ್ಲಿ ಬ್ಯೂಸಿಯಾಗಿರೋದ್ರಿಂದ ಭಾರತದ ಪುರುಷರ 2ನೇ ದರ್ಜೆಯ ತಂಡ ಈ ಟೂರ್ನಿಯಲ್ಲಿ ಭಾಗವಹಿಸಲಿದೆ. ಈ ತಂಡಕ್ಕೆ ಶಿಖರ್ ಧವನ್ ನಾಯಕತ್ವ ವಹಿಸುವ ಸಾಧ್ಯತೆಗಳಿವೆ. ಜೊತೆಗೆ ವಿವಿಎಸ್ ಲಕ್ಷ್ಮಣ್ ಕೋಚ್ ಆಗಿ ಮುನ್ನಡೆಸಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
2010 ಮತ್ತು 2014ರ ಏಷ್ಯನ್ ಗೇಮ್ಸ್ ಟೂರ್ನಿಯಲ್ಲಿ ಭಾರತ ಭಾಗವಹಿಸಲು ನಿರಾಕರಿಸಿತ್ತು. ಆದ್ರೆ 2028ಕ್ಕೆ ಅಮೆರಿಕದ ಲಾಸ್ ಏಂಜಲೀಸ್ನಲ್ಲಿ ನಡೆಯುವ ಒಲಿಂಪಿಕ್ಸ್ ನಲ್ಲಿ ಕ್ರಿಕೆಟ್ ಸೇರ್ಪಡೆಗೊಳಿಸಲು ಬಿಸಿಸಿಐ ಒತ್ತಾಯಿಸುತ್ತಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಏಷ್ಯನ್ ಗೇಮ್ಸ್ನಲ್ಲಿ ಟೀಂ ಇಂಡಿಯಾವನ್ನು ಕಣಕ್ಕಿಳಿಸಲು ಸಮ್ಮತಿಸಿದೆ. ಜುಲೈ 7 ರಂದು ಬಿಸಿಸಿಐನ ಮುಂಬರುವ ಅಪೆಕ್ಸ್ ಕೌನ್ಸಿಲ್ ಸಭೆ ನಡೆಯಲಿದ್ದು ಅಲ್ಲಿ ಶಿಖರ್ ಧವನ್ ತಂಡವನ್ನು ಮುನ್ನಡೆಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.