MS ಧೋನಿ ವಿರುದ್ಧ ಗೌತಮ್ ಗಂಭೀರ್ ಗುಡುಗಿದ್ಯಾಕೆ….?
ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಆಯೋಜನೆಯ ಟೂರ್ನಿಗಳಲ್ಲಿ ಭಾರತ ತಂಡ ಗೆಲ್ಲಬೇಕೆಂದರೆ ವ್ಯಕ್ತಿ ಪೂಜೆ ಮಾಡುವುದನ್ನು ಬಿಡಬೇಕು. ವಿರಾಟ್ ಕೊಹ್ಲಿ, ಎಂಎಸ್ ಧೋನಿಯಂತಹ ಆಟಗಾರರನ್ನು ಬಿಂಬಿಸುವುದನ್ನು ಬಿಟ್ಟು ಉತ್ತಮ ಪ್ರದರ್ಶನ ತೋರುವ ಆಟಗಾರರ ಕಡೆಗೂ ಬೆಳಕು ಚೆಲ್ಲಬೇಕೆಂದು ವಿಶ್ವಕಪ್ ವಿಜೇತ ಆಟಗಾರ ಗೌತಮ್ ಗಂಭೀರ್ ತಿಳಿಸಿದ್ದಾರೆ.
ಕಳೆದ ಭಾನುವಾರ ಅಂತ್ಯಗೊಂಡಿದ್ದ ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ, ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ 209 ರನ್ಗಳ ಭಾರೀ ಅಂತರದಿಂದ ಸೋತು ಮುಖಭಂಗ ಅನುಭವಿಸಿತ್ತು. ಆ ಮೂಲಕ 2013ರ ಬಳಿಕ ಟ್ರೋಫಿ ಗೆಲ್ಲುವ ಅವಕಾಶವನ್ನು ಭಾರತ ಕೈಚೆಲ್ಲಿಕೊಂಡಿತ್ತು. ಈ ಕುರಿತು ಗಂಭೀರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಎಂಎಸ್ ಧೋನಿ ಹೆಸರನ್ನು ವೈಯಕ್ತಿಕವಾಗಿ ಪ್ರಸ್ತಾಪಿಸದ ಗೌತಮ್ ಗಂಭೀರ್, 2007 ಹಾಗೂ 2011ರಲ್ಲಿ ಭಾರತ ತಂಡ ಪ್ರಶಸ್ತಿ ಗೆದ್ದಾಗ ಟ್ರೋಫಿ ಜಯಿಸಿದಾಗ ಕೇವಲ ಒಬ್ಬರನ್ನು ಮಾತ್ರ ಹೀರೋ ಆಗಿ ಬಿಂಬಿಸಲಾಗಿತ್ತು. ಇದಕ್ಕೆ ಕಾರಣವಾಗಿದ್ದ ಆತನ ಪಿಆರ್ ತಂಡ. ಆದರೆ ಆ ಟೂರ್ನಿಗಳಲ್ಲಿ ಭಾರತ ತಂಡ ಫೈನಲ್ ಸುತ್ತು ಪ್ರವೇಶಿಸಬೇಕಾದರೆ ಯುವರಾಜ್ ಸಿಂಗ್ ಕಾಣಿಕೆ ಮಹತ್ತರವಾಗಿತ್ತು. ಆದರೆ, ಯುವಿ ಹೆಸರನ್ನು ಯಾರೂ ಪ್ರಸ್ತಾಪಿಸುವುದಿಲ್ಲ ಎಂದು ಗಂಭೀರ್ ಗುಡುಗಿದ್ದಾರೆ
“ನಮ್ಮಲ್ಲಿ ತಂಡಕ್ಕಿಂತ ಆಟಗಾರನಿಗೆ ಹೆಚ್ಚು ಪ್ರಾಶಸ್ತ್ಯ ನೀಡುತ್ತೇವೆ. ಆದರೆ ಇಂಗ್ಲೆಂಡ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ನಂತಹ ದೇಶಗಳಲ್ಲಿ ವೈಯಕ್ತಿಕ ಮನ್ನಣೆಗಿಂತ ತಂಡದ ಸಾಧನೆಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಇದು ಕೂಡ ಟೀಮ್ ಇಂಡಿಯಾ ಟ್ರೋಫಿ ಗೆಲ್ಲದಿರಲು ಪ್ರಮುಖ ಕಾರಣವಾಗಿದೆ. ಒಂದು ತಂಡವಾಗಿ ಆಡಿದರೆ ಖಂಡಿತವಾಗಿಯೂ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು,” ಎಂದು ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.