ಶ್ರೀರಾಮ ದೇವಸ್ಥಾನಕ್ಕೆ 10 ಲಕ್ಷ ದೇಣಿಗೆ ನೀಡಿದ ಟಾಲಿವುಡ್ ನಟ ಪ್ರಭಾಸ್
ಆರಂಭದಿಂದಲೂ ಒಂದಲ್ಲ ಒಂದು ಕಾರಣಕ್ಕೆ ವಿವಾದ ಹುಟ್ಟುಹಾಕಿರುವ ಆದಿಪುರುಷ ಸಿನಿಮಾದ ಮೇಲೆ ನಟ ಪ್ರಭಾಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಭಾರಿ ಬಜೆಟ್ ನಲ್ಲಿ ರೆಡಿಯಾಗಿರುವ ಆದಿ ಪುರುಷ್ ಸಿನಿಮಾ ಹಲವು ಕಾರಣಗಳಿಗೆ ಪ್ರಭಾಸ್ಗೆ ಮುಖ್ಯವಾಗಿದೆ.
ಈ ಮಧ್ಯೆ ನಟ ಪ್ರಭಾಸ್ ಶ್ರೀರಾಮ ದೇಗುಲಕ್ಕೆ 10 ಲಕ್ಷ ದೇಣಿಗೆ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ.
ಪ್ರಭಾಸ್ ಭದ್ರಾಚಲಂನ ಜನಪ್ರಿಯ ಶ್ರೀ ಸೀತಾರಾಮಚಂದ್ರ ಸ್ವಾಮಿ ದೇವಾಲಯಕ್ಕೆ 10 ಲಕ್ಷ ದೇಣಿಗೆಯನ್ನು ನೀಡಿದ್ದಾರೆ. ಪ್ರಭಾಸ್ ಕುಟುಂಬ ಸದಸ್ಯರು ದೇವಸ್ಥಾನದ ಕಾರ್ಯಕಾರಿ ಅಧಿಕಾರಿ ರಮಾ ದೇವಿ ಅವರಿಗೆ 10 ಲಕ್ಷದ ಚೆಕ್ ಹಸ್ತಾಂತರಿಸಿದ್ದಾರೆ. ಚೆಕ್ ಹಸ್ತಾಂತರಿಸುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಕೆಲವರು ಇದನ್ನು ಸಿನಿಮಾ ಪ್ರಚಾರದ ತಂತ್ರವೆಂದರೆ ಇನ್ನೂ ಕೆಲವರು ಇದನ್ನು ಪ್ರಭಾಸ್ಗೆ ಇರುವ ದೇವರ ಭಕ್ತಿ ಎಂದಿದ್ದಾರೆ.
ಆದಿಪುರುಷ್ ಸಿನಿಮಾದಲ್ಲಿ ಪ್ರಭಾಸ್ ಶ್ರೀರಾಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೀಸೆ ಬಿಟ್ಟು, ಉತ್ತಮ ದೇಹದಾರ್ಡ್ಯದೊಟ್ಟಿಗೆ ಪ್ರಭಾಸ್ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಟ್ರೈಲರ್ ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಆಗಿದ್ದು ಟ್ರೈಲರ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಈ ಹಿಂದೆ ಸಿನಿಮಾದ ಟೀಸರ್ ಬಿಡುಗಡೆ ಮಾಡಿದ್ದಾಗ ತೀವ್ರ ಟೀಕೆಗೆ ಚಿತ್ರತಂಡ ಗುರಿಯಾಗಿತ್ತು ಮಾತ್ರವಲ್ಲದೆ ಹಲವರು, ರಾಮಾಯಣದ ಕತೆ ತಿದ್ದಿರುವ ಆರೋಪ ಮಾಡಿ ದಾವೆಗಳನ್ನು ಹೂಡಿದ್ದರು.
ಆದಿಪುರುಷ್ ಸಿನಿಮಾದಲ್ಲಿ ಸೀತೆಯ ಪಾತ್ರದಲ್ಲಿ ಕೃತಿ ಸೆನನ್, ರಾವಣನಾಗಿ ಸೈಫ್ ಅಲಿ ಖಾನ್ ಲಕ್ಷ್ಮಣನಾಗಿ ನಟ ಸನ್ನಿ ಸಿಂಗ್, ಹನುಮಂತನ ಪಾತ್ರದಲ್ಲಿ ದೇವದತ್ತ ನಾಗೆ ನಟಿಸಿದ್ದು ಚಿತ್ರವನ್ನು ರಾಷ್ಟ್ರಪ್ರಶಸ್ತಿ ವಿಜೇತ ಓಂ ರಾವತ್ ನಿರ್ದೇಶನ ಮಾಡಿದ್ದಾರೆ. ಭೂಷಣ್ ಕುಮಾರ್ ನಿರ್ಮಾಣದ ಈ ಸಿನಿಮಾ ಜೂನ್ 16ಕ್ಕೆ ಬಿಡುಗಡೆ ಆಗಲಿದೆ.